Header Ads

ನಿವೇದಿತಾ ಪ್ರೌಢ ಶಾಲೆ ಬಸ್ರೂರು


ನಿವೇದಿತಾ ಪ್ರೌಢ ಶಾಲೆ ಬಸ್ರೂರು

           ಬಸ್ರೂರಿನಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಹೈಸ್ಕೂಲ್ ಅಗತ್ಯವೆಂದು ಮನಗಂಡು 1968ರಲ್ಲಿ ಬಸ್ರೂರು ಹಿಂದೂ ಸ್ಕೂಲ್ ಅಸೋಸಿಯೇಷನ್ ವತಿಯಿಂದ ನಿವೇದಿತಾ ಹೈಸ್ಕೂಲನ್ನು ಆರಂಭಿಸಿದರು. ನಮ್ಮ ಸಂವಿಧಾನದ 15ನೇ ವಿಧಿ 3ನೇ ಕಲಂ ಪ್ರಕಾರ ದೇಶದ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಅವಕಾಶ ನೀಡಲು ಸರಕಾರಕ್ಕೆ ವಿಶೇಷ ಹಕ್ಕುಗಳನ್ನು ನೀಡಲಾಗಿದೆ. ಈ ವಿಧಿಯ ಪ್ರಕಾರ ಮಹಿಳಾ ಶಿಕ್ಷಣದ ಪ್ರಗತಿ ಭಾರತೀಯ ಶಿಕ್ಷಣದ ಪ್ರಮುಖ ಗುರಿಯಾಗಬೇಕು ಎಂದಿದೆ. ಸ್ತ್ರೀ ಶಿಕ್ಷಣದ ಪ್ರಾಮುಖ್ಯತೆಯನ್ನು ಈ ಮುಂದಿನ ವ್ಯಾಖ್ಯೆಗಳು ಪ್ರತಿಬಿಂಬಿಸುತ್ತವೆ. "Man is the brain but woman is the heart of humanity" ಜವಾಹರಲಾಲ್ ನೆಹರು ಅವರ ಪ್ರಕಾರ "Education to a boy is education to only one person. But education to a girl is education to entire family.." ಬಾಲಕಿಯರ ಶಿಕ್ಷಣದ ಮಹತ್ವವನ್ನು ಹಿಂದೂ ಸ್ಕೂಲ್ ಅಸೋಸಿಯೇಷನ್ ಪ್ರಮುಖರು ಅರಿತು ನಿವೇದಿತಾ ಪ್ರೌಢ ಶಾಲೆಯನ್ನು ಊರ ಹಾಗೂ ಇತರ ವಿದ್ಯಾಭಿಮಾನಿಗಳ ಸಹಕಾರದಿಂದ 1968 ಜೂನ್ 10ರಂದು ಆರಂಭಿಸಿದರು. ನಿವೇದಿತಾ ಹೈಸ್ಕೂಲಿನ ಪ್ರಥಮ ಮುಖ್ಯೋಪಾಧ್ಯಾಯರಾಗಿ ಶ್ರೀ ಎಸ್. ಶಿವರಾಮ ಶೆಟ್ಟಿಯವರು ಉತ್ತಮ ಆದರ್ಶ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿರುವರು. ಈ ಹೈಸ್ಕೂಲಿನ ಸಂಚಾಲಕರಾಗಿ ಶ್ರೀ ಬಿ. ಆರ್. ಹೆಗ್ಡೆಯವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದರು ಮತ್ತು ಇವರ ಮುಖಂಡತ್ವದಲ್ಲಿ ಶಾಲೆ ಉತ್ತಮ ಹೆಸರುಗಳಿಸುವಲ್ಲಿ ಪ್ರಗತಿಯ ಹೆಜ್ಜೆಯಿಟ್ಟಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶ್ರೀ ಬಿ. ಅಪ್ಪಣ್ಣ ಹೆಗ್ಡೆಯವರು ಸಮಯೋಚಿತ ಸಲಹೆ ಸೂಚನೆಗಳನ್ನು ಕೊಡುತ್ತಾ ಶಾಲೆಯ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವರು. ನಿವೇದಿತಾ ಬಾಲಕಿಯರ ಪ್ರೌಢಶಾಲೆಯನ್ನು ಕಟ್ಟಿ ಬೆಳೆಸುವಲ್ಲಿ ಸಹಾಯ ಸಹಕಾರ ಒದಗಿಸಿದ ಎಲ್ಲಾ ಮಹನೀಯರು ಸ್ಮರಣಾರ್ಹರು.

Nivedita High School, Basrur

ನಿವೇದಿತಾ ಪ್ರೌಢ ಶಾಲೆ ಬಸ್ರೂರು

       ನಿವೇದಿತಾ ಬಾಲಕಿಯರ ಪ್ರೌಢಶಾಲೆಯ ಪ್ರಥಮ ಶೈಕ್ಷಣಿಕ ವರ್ಷವಾದ 1968-69ರಲ್ಲಿ 8ನೇ ತರಗತಿಯನ್ನು ಮತ್ತು ಮುಂದಿನ ಎರಡು ವರ್ಷಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿ ಪರಿಣಾಮಕಾರಿ ಬೋಧನೆ ಮತ್ತು ತರಬೇತಿಯಿಂದ ವಿದ್ಯಾರ್ಥಿನಿಯರಲ್ಲಿ ಉತ್ತಮ ಪರಿವರ್ತನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಿಂದೂ ಶಾಲೆಯ ವಜ್ರಮಹೋತ್ಸವ ಸಂದರ್ಭದಲ್ಲಿ ಪ್ರೌಢಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಕಲಾಮಂಟಪವನ್ನು 1971ರಲ್ಲಿ ಶಿಕ್ಷನಾಸಕ್ತರಾದ ಶ್ರೀ ಬಿ. ವೀರರಾಜೇಂದ್ರ ಹೆಗ್ಡೆಯವರು ಅವರ ಮಾತೃಶ್ರಿಯವರ ಹೆಸರಿನಲ್ಲಿ ಶ್ರೀಮತಿ ಚಂದಮ್ಮ ಹೆಗ್ಗಡ್ತಿ ಕಲಾಮಂಟಪವನ್ನು ಕಟ್ಟಿಸಿ ಸ್ತುತ್ಯಾರ್ಹರಾಗಿದ್ದಾರೆ.

       ಪ್ರೌಢಶಾಲೆಯ ನಿರ್ವಹಣಾ ಮಂಡಳಿಯ ಮುಖ್ಯಸ್ಥರು ಬಾಲಕರಿಗೂ ನಿವೇದಿತಾ ಪ್ರೌಢ ಶಾಲೆಯಲ್ಲಿ ಕಲಿಯಲು ಅನುಕೂಲ ಮಾಡಿಕೊಡಲು ನಿರ್ಧರಿಸಿ 1980-81ನೇ ಸಾಲಿನಿಂದ ನಿವೇದಿತಾ ಪ್ರೌಢ ಶಾಲೆಯಲ್ಲಿ ಸಹ ಪ್ರೌಢ ಶಿಕ್ಷಣ ನೀಡುವ ಸದಾವಕಾಶ ಒದಗಿಸಿಕೊಟ್ಟರು.

       ಶಾಲೆಯಲ್ಲಿ ಗ್ರಂಥಾಲಯ ವ್ಯವಸ್ಥೆ ಇದೆ. ವಿಜ್ಞಾನದಲ್ಲಿ ನೈಜ ಅರಿವು ಒದಗಿಸಲು ಪ್ರಯೋಗ ಶಾಲೆಯೂ ಸಹ ಇದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘ ಮತ್ತು ಆಟೋಟ ಚಟುವಟಿಕೆಗಳನ್ನು ಕ್ರಿಯಾತ್ಮಕವಾಗಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸರಕಾರದಿಂದ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಬೇರೆ ಬೇರೆ ರೀತಿಯ ಅನುಕೂಲತೆಗಳನ್ನು ಮಾಡಿಕೊಡಲಾಗಿದೆ.

       ನಿವೇದಿತಾ ಶಾಲೆಯು ಉತ್ತಮ ಕಟ್ಟಡ ಹೊಂದಿದ್ದು ಪ್ರಶಾಂತ ವಾವಾವರಣದಲ್ಲಿ ನೆಲೆಯಾಗಿದೆ. ಹಿಂದೂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಜಂಟಿಯಾಗಿ ಸುಮಾರು 5 ಎಕರೆ ಶಾಲಾ ನಿವೇಶನ ಹೊಂದಿವೆ. ಮುಖ್ಯೋಪಾಧ್ಯಾಯರು, ಅಧ್ಯಾಪಕರ ಸೇವಾ ಮನೋಭಾವ ಮತ್ತು ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಉತ್ತಮ ಸಹಕಾರ ನೀಡುವಲ್ಲಿ ಸಹಾಯಕವಾಗಿದೆ.

       70-80ರ ದಶಕದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸರಾಸರಿ 62.9% ಇದ್ದು, 1989-90ರಲ್ಲಿ 85% ಫಲಿತಾಂಶ ಪಡೆದಿದೆ. 1984-85ರಲ್ಲಿ ಸವಿತಾ ಕಾರಂತ್ 28ನೇ ರಾಂಕ್ ಮತ್ತು 1985-86ರಲ್ಲಿ ಲಕ್ಷ್ಮಿ ನಾರಾಯಣ ಪೈ 12ನೇ ರಾಂಕ್ ಗಳಿಸಿರುತ್ತಾರೆ. ನಿವೇದಿತಾ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಶ್ರೀ ಎಂ. ವೀರಣ್ಣ ಶೆಟ್ಟಿಯವರಿಗೆ ಅವರ ನಿಸ್ವಾರ್ಥ ಸೇವೆ, ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ತೋರಿರುವ ಶ್ರಮ ಸಾಧನೆ, ವಿದ್ಯಾರ್ಥಿ ಕ್ಷೇಮ ಪಾಲನೆ ಮತ್ತು ಪರಿಪೂರ್ಣ ಹಾಗೂ ಪರಿಣಾಮಕಾರಿ ಬೋಧನೆಗಳಿಗಾಗಿ ಕರ್ನಾಟಕ ಸರ್ಕಾರ ಪ್ರತಿಭಾವಂತ ಶಿಕ್ಷಕರಿಗೆ ನೀಡುವ ರಾಜ್ಯಪ್ರಶಸ್ತಿಯನ್ನು 1993-94ನೇ ಶೈಕ್ಷಣಿಕ ವರ್ಷದಲ್ಲಿ ನೀಡಿ ಗೌರವಿಸಿದೆ.

ಆಧಾರ: ಎನ್. ಪಿ. ರುದ್ರಸ್ವಾಮಿ ಅವರ ಲೇಖನ.
ಚಿತ್ರ: ಶಿವರಾಜ್ ಶೆಟ್ಟಿ.

Theme images by sndr. Powered by Blogger.